ಸದ್ಯದಲ್ಲಿ ಬಿಡುಗಡೆ ಆಗಲಿರುವ, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಕೋರಿಕೆಯ ಮೇಲೆ ಬರೆದ ಚೆಸ್ ಕುರಿತಾದ ಪುಸ್ತಕದ ಒಂದು ಅಧ್ಯಾಯ
ತಮ್ಮ ಮುಂದಿನ ನಡೆಯ ಬಗ್ಗೆ ಯೋಚಿಸುತ್ತ ಬೋರ್ಡ್ ಮುಂದೆ ಕೂತಿರುವ ಯಾರಾದರೂ ಪ್ರಸಿದ್ಧ ಗ್ರಾಂಡ್ ಮಾಸ್ಟರ್ ಗ್ಯಾರಿ ಕಾಸ್ಪರೋವ್ ರ “ಚೆಸ್ ಒಂದು ಮಾನಸಿಕ ಹಿಂಸೆ” ಎನ್ನುವ ತಲ್ಲಣವನ್ನು ಖಂಡಿತ ಒಪ್ಪುತ್ತಾರೆ. ಆದರೆ, ಚೆಸ್ ತನ್ನ ದೀರ್ಘ ಇತಿಹಾಸದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಅಥವಾ ಎಲ್ಲರಿಗೆ ಎಲ್ಲವೂ ಆಗಿದೆ: ಪ್ರತಿಭೆಯ ಕ್ರೂರ ಮಾಪಕ, ಮಾನವ ಅನುಭವದ ರೂಪಕ, ರಾಜಕೀಯ ಆಯುಧ, ಬುದ್ಧಿಮತ್ತೆಯ ಪ್ರದರ್ಶನ, ಮೋಜಿನ ಸಣ್ಣ ಹವ್ಯಾಸ. ನೆಟ್ಫ್ಲಿಕ್ಸ್ ನಾಟಕ “ದಿ ಕ್ವೀನ್ಸ್ ಗ್ಯಾಂಬಿಟ್” ನ ಯಶಸ್ಸು ಆಟದಲ್ಲಿ ಸಾಮಾನ್ಯರ ಜನಪ್ರಿಯ ಆಸಕ್ತಿಗೆ ಮರುಜೀವ ನೀಡಿದೆ , ಆದರೆ ನಾಗರಿಕತೆಯ ಬಟ್ಟೆಯಲ್ಲಿ ಚೆಸ್ ಅನ್ನು ಎಷ್ಟು ಸಮಯದಿಂದ ಹೆಣೆಯಲಾಗಿದೆ? ಇಂದಿಗೂ ಜೀವಂತವಾಗಿರುವ ಆಸಕ್ತಿ ಎಲ್ಲಿಂದ, ಯಾಕೆ, ಹೇಗೆ? ಹಾಗಾದರೆ ಚೆಸ್ ಬರೇ ಆಟವಾಗಿ ಬೆಳವಣಿಗೆ ಕಂಡುದು ಅಷ್ಟೆಯೇ?
ಭಾರತದ ಚದುರಂಗ ಕಾಲಾನಂತರದಲ್ಲಿ, ಪರ್ಶಿಯಾದ ಶತರಂಜ್ ಆಗಿದ್ದು ನಂತರ ಇರಾನ್ಗೆ ವಲಸೆಯಾಗಿ ಚತ್ರಂಗ್ ಎಂಬ ಹೊಸ ಆಟವಾಗಿ ವಿಕಸನಗೊಂಡಿತು, ಅದರ ನಿಯಮಗಳು ಆಧುನಿಕ ದಿನದ ಚೆಸ್ ಹತ್ತಿರವಾಗಿದ್ದವು. ರಾಜನನ್ನು ‘ಚೆಕ್’ ಮೂಲಕ ಎಚ್ಚರಿಸುವ ಕಲ್ಪನೆಯನ್ನು ಪರಿಚಯಿಸಿದವರು ಪರ್ಶಿಯನ್ನರು.
ಪರ್ಶಿಯಾದ ಸಂಸ್ಕೃತಿಗೆ ಚತ್ರಂಗ್ ಎಷ್ಟು ಮಹತ್ವದ್ದು ಎಂದು ತಿಳಿಯಬೇಕಿದ್ದರೆ ಅವರ ಮಹಾಕಾವ್ಯವಾದ ಶಹನಾಮೆಯನ್ನು ಓದಬೇಕು. ಇಂಗ್ಲೆಂಡಿನ ಷೇಕ್ಸ್ಪಿಯರ್ ಅಥವಾ ಇಟಲಿಯ ಡಾಂಟೆಯಂತಹ ಮಹಾನ್ ಸಾಹಿತಿಗಳಿಗೆ ಸಮನಾಗಿದ್ದವನು ಎಂದು ಇರಾನಿಗರು ವ್ಯಾಪಕವಾಗಿ ಪರಿಗಣಿಸುವ ಬರಹಗಾರ ಫೆರ್ಡೋವ್ಸಿ ಬರೆದ ಶಹನಾಮೆ ಒಂದು ರೀತಿಯಲ್ಲಿ ಚೆಸ್ ನ ಮೂಲ ಕಥೆಯನ್ನು ತಿಳಿಸುತ್ತದೆ. ಭಾರತದಿಂದ ಆಗಮಿಸಿದ್ದ ರಾಯಭಾರಿಯೊಬ್ಬ ಪರ್ಶಿಯನ್ ನ್ಯಾಯಾಲಯಕ್ಕೆ ಒಂದು ಲೇಖನವನ್ನು ತಂದಿರುತ್ತಾನೆ ಜೊತೆಗೆ ನಿಗೂಢ ಹಲಗೆ ಮತ್ತು ತುಣುಕುಗಳನ್ನು ಕೂಡ. ರಾಯಭಾರಿ ಹೇಳುತ್ತಾನೆ ‘ಓ ಮಹಾನ್ ದೊರೆಯೇ , ನಿಮ್ಮ ನೆಲದ ಬುದ್ಧಿವಂತರನ್ನು ಕರೆತನ್ನಿ ಮತ್ತು ಈ ಆಟದ ರಹಸ್ಯಗಳನ್ನು ಅವರು ಪರಿಹರಿಸಲಿ. ಅವರು ಯಶಸ್ವಿಯಾದರೆ , ನನ್ನೊಡೆಯ ಹಿಂದ್ನ ರಾಜನು ಕಪ್ಪಕಾಣಿಕೆ ಸಲ್ಲಿಸುತ್ತಾನೆ, ಆದರೆ ಅವರು ವಿಫಲವಾದರೆ ಪರ್ಶಿಯನ್ನರು ಕಡಿಮೆ ಬುದ್ಧಿಶಕ್ತಿ ಇರುವವರು ಎಂಬುದಕ್ಕೆ ಪುರಾವೆ ಸಿಕ್ಕಿದಂತಾಗುತ್ತದೆ ಮತ್ತು ನಾವು ಇರಾನ್ನಿಂದ ಕಪ್ಪಕಾಣಿಕೆಯನ್ನು ಕೇಳುತ್ತೇವೆ”. ಹಿಂದ್ ಪ್ರಾಂತ್ಯದಿಂದ ಚದುರಂಗ ತಲುಪಿದ ರೀತಿಯನ್ನು ನಿರೂಪಿಸಲು ಮಹಾಕಾವ್ಯದ ಈ ಕೆಲವು ಸಾಲುಗಳೇ ಸಾಕು. ರಾಯಭಾರಿಯ ಲೇಖನ ಒಡ್ಡುವ ಸವಾಲು, ನಿಗೂಢ ಹಲಗೆ , ತುಣುಕುಗಳು ನೀಡುತ್ತಿರುವ ಆಹ್ವಾನ ಮತ್ತೆ ದೂರದೇಶದ ಹೊಸ ಆಟವೊಂದು ಪರ್ಶಿಯಾದ ಸಂಸ್ಕೃತಿಯಿಂದ ಕೊಟ್ಟು ತೆಗೆದುಕೊಂಡ ಬಗೆಗಳ ಕುರಿತು ಅದು ನಮ್ಮ ಕಲ್ಪನೆಯನ್ನು ಕದಡುತ್ತದೆ.
ಪರ್ಶಿಯನ್ನರ ಅದೃಷ್ಟಕ್ಕೆ , ಅವರಲ್ಲಿ ಒಬ್ಬರಾದ ಬೊಜೋರ್ಗ್ಮೆಹರ್ ಎಂಬ ಬುದ್ಧಿವಂತ ವ್ಯಕ್ತಿ ಈ ಆಟವನ್ನು ಹೇಗೆ ಆಡಬೇಕೆಂದು ಎಂದು ಕಂಡುಕೊಳ್ಳುವಲ್ಲಿ ಯಶಸ್ವಿಯಾದನಂತೆ. ಭಾರತೀಯ ಆಟವನ್ನು ಪರ್ಶಿಯನ್ ಚತ್ರಂಗ್ನ ಆಗಿ ಪರಿವರ್ತಿಸಲು ದಾರಿ ಮಾಡಿಕೊಟ್ಟ ಐತಿಹಾಸಿಕ ಕ್ಷಣ ಅದು. ಆಟದ ಈ ಮೂಲಪುರಾಣದಲ್ಲಿ ಎಷ್ಟು ಸತ್ಯವಿದೆ ಅಥವಾ ಇಲ್ಲ, ಎಂಬುದನ್ನು ಖಡಾಖಂಡಿತವಾಗಿ ಹೇಳುವವರು ಇಲ್ಲ. ಆದರೆ ಚತ್ರಂಗ್ ಪರ್ಶಿಯಾದಲ್ಲಿ ಖಂಡಿತವಾಗಿಯೂ ಜನಪ್ರಿಯ ಕಾಲಕ್ಷೇಪವಾಗಿತ್ತು ಮತ್ತು ಪರ್ಶಿಯವನ್ನು ಮುಸ್ಲಿಂ ದೊರೆಗಳು ಆಕ್ರಮಿಸಿ ವಿಜಯ ಸಾಧಿಸಿದಾಗಲೂ ಅಲ್ಲೇ ಉಳಿಯಿತು. ವ್ಯಾಪಾರಿಗಳು ಮತ್ತು ಆಕ್ರಮಣಕಾರರು ಆಟವನ್ನು ವ್ಯಾಪಕವಾಗಿ ಸ್ವೀಕರಿಸಿದಾಗ ಆಟವು ಮುಸ್ಲಿಂ ಪ್ರಪಂಚದಾದ್ಯಂತ ಮತ್ತು ಅದರಾಚೆಗೂ ಹರಡಿತು.
ಚೆಸ್ನ ಆರಂಭಿಕ ಮಾದರಿಗಳು ಶ್ರೀಮಂತರು, ಮಂದಿರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಪಾದ್ರಿಗಳಲ್ಲಿ ಜನಪ್ರಿಯವಾದವು. ವಿವಿಧ ಪ್ರದೇಶಗಳಲ್ಲಿ ಆಟದ ಜನಪ್ರಿಯತೆಯ ಬಗ್ಗೆ ನೈತಿಕ ಭೀತಿಯೂ ಇತ್ತು , ಇದು ಸಮಕಾಲೀನ ಜಗತ್ತಿನಲ್ಲಿ ಮಕ್ಕಳ ಮನಸ್ಸನ್ನು ಆವರಿಸಿರುವ ದೂರದರ್ಶನ ಅಥವಾ ವಿಡಿಯೋ ಗೇಮ್ಗಳ ಬಗ್ಗೆ ಇರುವ ಚರ್ಚೆ , ಕಾಳಜಿಗಳಂತೆಯೇ ಇತ್ತು. ೧೦೦೫ರಲ್ಲಿ ಈಜಿಪ್ಟ್ನಲ್ಲಿ ಚೆಸ್ ನ್ನು ನಿಷೇಧಿಸಲಾಯಿತು. ೧೦೬೧ ರಲ್ಲಿ ಚರ್ಚ್ ನ ಸಲಹೆಗಾರರು , ಪೋಪ್ ರಿಗೆ ಅರ್ಚಕ ವೃತ್ತಿಯವರು ಚೆಸ್ ಆಡುವಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ದೂರು ನೀಡಿದರು. ಕೆಲವು ಶತಮಾನಗಳ ನಂತರ, ೯ನೆಯ ಲೂಯಿಸ್ ಫ್ರಾನ್ಸ್ನಲ್ಲಿ ಚೆಸ್ ಅನ್ನು ನಿಷೇಧಿಸಿದ, ಈ ಆಟದಿಂದ ಬರೇ ಸಮಯ ಹಾಳು ಎಂದ.
ಆದರೂ , ಆಟದ ಜನಪ್ರಿಯತೆ ಕಡಿಮೆಯಾಗಲಿಲ್ಲ, ಮತ್ತು ೧೫ನೆಯ ಶತಮಾನದ ವೇಳೆಗೆ ಆಟದ ನಿಯಮಗಳು ಮತ್ತಷ್ಟು ಬದಲಾದವು, ಇಂದು ನಾವು ಗುರುತಿಸುವ ಚೆಸ್ ಆಗಿ ಮಾರ್ಪಟ್ಟವು. ಗಮನಾರ್ಹವಾಗಿ, ಒಂದು ಕಾಲದಲ್ಲಿ “ವಜೀರ್” ಎಂದು ಕರೆಯಲ್ಪಡುತ್ತಿದ್ದ ತುಣುಕು, ಬೋರ್ಡ್ನಲ್ಲಿ ಸೀಮಿತ ವ್ಯಾಪ್ತಿಯನ್ನು ಹೊಂದಿತ್ತು, ಅದೇ ಮುಂದೆ ಅಸಾಧಾರಣ ಶಕ್ತಿಯ ರಾಣಿಯಾಗಿ ವಿಕಸನಗೊಂಡಿತು. ಸ್ತ್ರೀವಾದಿ ಇತಿಹಾಸಕಾರ ಮರ್ಲಿನ್ ಯಾಲೋಮ್ ಸೇರಿದಂತೆ ಕೆಲವು ವಿದ್ವಾಂಸರು, ಆ ಪರಿವರ್ತನೆ ಕ್ರಿಸ್ಟೋಫರ್ ಕೊಲಂಬಸ್ನ ಹೊಸ ಜಗತ್ತಿನ ಅನ್ವೇಷಣೆಗಳನ್ನು ಬೆಂಬಲಿಸಿದ್ದ ಫ್ರೆಂಚ್ ರಾಣಿ ಎಲೆನಾರ್ ಮತ್ತು ಸ್ಪ್ಯಾನಿಷ್ ರಾಣಿ ಇಸಾಬೆಲ್ಲರ ನಿಜ ಜೀವನದಿಂದ ಪ್ರಭಾವಿತವಾಗಿದೆ ಎಂದಿದ್ದರು.
ಹಾಗಂತ ಚೆಸ್ ಔಪಚಾರಿಕವಾಗಿ ರಚನಾತ್ಮಕ ಕ್ರೀಡೆಯಾಗಲು ಇನ್ನೂ ಸ್ವಲ್ಪ ಸಮಯ ಹಿಡಿಯಿತು . ೧೯ನೆಯ ಶತಮಾನದಲ್ಲಿ ಚೆಸ್ ಸಂಬಂಧಿ ಪುಸ್ತಕಗಳು , ಸಮುದಾಯಗಳುಮತ್ತು ಸಂಸ್ಥೆಗಳು ಪ್ರವರ್ಧಮಾನಕ್ಕೆ ಬಂದವು. ಮೊದಲ ಅಂತರರಾಷ್ಟ್ರೀಯ ಚೆಸ್ ಪಂದ್ಯ ೧೮೫೧ ರಲ್ಲಿ ಲಂಡನ್ನಲ್ಲಿ ನಡೆಯಿತು. ಇದನ್ನು ಇಂಗ್ಲಿಷ್ ಆದ್ಯ ಆಟಗಾರ ಹೊವಾರ್ಡ್ ಸ್ಟೌಂಟನ್ ಆಯೋಜಿಸಿದ್ದು . ಇಂದಿಗೂ ಎಲ್ಲೆಡೆ ಬಳಸಲಾಗುವ ಪ್ರಮಾಣಿತ ಚೆಸ್ ಸೆಟ್ ಅನ್ನು ಆತನ ನೆನಪಲ್ಲಿ ಸ್ಟೌಂಟನ್ ಚೆಸ್ ಸೆಟ್ ಎಂದು ಕರೆಯಲಾಗುತ್ತದೆ . ಆ ಪಂದ್ಯಾವಳಿಯ ವಿಜೇತ ಜರ್ಮನ್ ದೈತ್ಯ ಪ್ರತಿಭೆ ಅಡಾಲ್ಫ್ ಆಂಡರ್ಸನ್. ಅವನ ಆಂದಿನ ಆಟ ೧೯ನೆಯ ಶತಮಾನದ ‘ರೊಮ್ಯಾಂಟಿಕ್’ ಶೈಲಿಗೆ ಸಾಕ್ಷಿಯಾಗಿತ್ತು. ಆಟದುದ್ದಕ್ಕೂ ಧೈರ್ಯಶಾಲಿ ಆಕ್ರಮಣಕಾರಿ ನಡೆಗಳು, ಉಳಿವಿಗಾಗಿ ನೀಡುವ ಬಲಿ , ಅನಿರೀಕ್ಷಿತ ತಿರುವುಗಳು ಕಂಡವು . ಇದು ನಂತರ ರೂಢಿಗೆ ಬಂದ ಗುಪ್ತ ಯುದ್ಧತಂತ್ರ, ನಿಧಾನವಾಗಿ ಹತೋಟಿ ಪಡೆಯುವ ವಿಧಾನಗಳಿಂದ ತುಂಬ ಬೇರೆಯಾಗಿತ್ತು. ೧೮೫೧ರಲ್ಲಿ ಅಂಡರ್ಸ್ಸನ್ ಆಡಿದ ಇನ್ನೊಂದು ಪಂದ್ಯ ‘ಇಮ್ಮಾರ್ಟಲ್ ಗೇಮ್’ ಅಥವಾ ಅಮರ್ತ್ಯ ಆಟ ಎನ್ನುವ ಹೆಸರಲ್ಲಿ ಚೆಸ್ ಇತಿಹಾಸದಲ್ಲಿ ದಾಖಲಾಗಿದೆ ಮತ್ತೆ ಇಂದಿಗೂ ಮೆಚ್ಚುಗೆಯನ್ನು ಪಡೆದಿದೆ, ಚೆಸ್ ವಿದ್ಯಾರ್ಥಿಗಳ ಅಧ್ಯಯನದ ವಿಷಯವಾಗಿದೆ. ಅಗಾಧ ಧೈರ್ಯದಿಂದ, ಆಂಡರ್ಸನ್ ತನ್ನ ಎರಡೂ ರೂಕ್ಗಳನ್ನು, ಬಿಷಪ್ ಮತ್ತು ರಾಣಿಯನ್ನು ತ್ಯಾಗ ಮಾಡಿಯೂ ಆಟವನ್ನು ಗೆದ್ದುದು ನಾಟಕೀಯ ಶೈಲಿಯ ಆಟದ ಉತ್ತಮ ಉದಾಹರಣೆಯಾಗಿದೆ.
೨೦ನೆಯ ಶತಮಾನದಲ್ಲಿ , ವಿಶೇಷವಾಗಿ ಯುಎಸ್ಎಸ್ಆರ್ ಸ್ಥಾಪನೆಯ ನಂತರ, ಚೆಸ್ ರಾಜಕೀಯ ಆಯಾಮವನ್ನು ಪಡೆಯಿತು. ಗ್ಯಾರಿ ಕಾಸ್ಪರೋವ್ ಒಂದೆಡೆ ಹೇಳಿದಂತೆ , ‘ಕುಸಿಯುತ್ತಿದ್ದ ಪಶ್ಚಿಮದ ಮೇಲೆ ಸೋವಿಯತ್ ಕಮ್ಯುನಿಸ್ಟ್ ಆಡಳಿತದ ಬೌದ್ಧಿಕ ಶ್ರೇಷ್ಠತೆಯನ್ನು ಪ್ರದರ್ಶಿಸಲು ಸೋವಿಯತ್ ಅಧಿಕಾರಿಗಳು ಚೆಸ್ ನ್ನು ಬಹಳ ಉಪಯುಕ್ತ ಸೈದ್ಧಾಂತಿಕ ಸಾಧನವಾಗಿ ಪರಿಗಣಿಸಿದರು”. ಸೋವಿಯತ್ ಒಕ್ಕೂಟವು ಚೆಸ್ ತರಬೇತಿ ಮತ್ತು ಪ್ರತಿಭೆಯನ್ನು ಪೋಷಿಸುವಲ್ಲಿ ಹೊಂದಿದ್ದ ಅತಿರೇಕದ ಆಸಕ್ತಿ ದಶಕಗಳ ಕಾಲ ಆಟದ ಮೇಲೆ ಅದರ ಪ್ರಾಬಲ್ಯಕ್ಕೆ ಕಾರಣವಾಯಿತು. ಬ್ಯಾಲೆ ಮತ್ತು ಕವಿತೆಗಳ ಜೊತೆಗೆ ಚೆಸ್ ಕೂಡ ಸೋವಿಯೆತ್ ಸಮಾಜದ ಸಾಂಸ್ಕೃತಿಕ ಅಸ್ಮಿತೆಯಾಯಿತು. ಸೋವಿಯತ್ ಚಾಂಪಿಯನ್ ಬೋರಿಸ್ ಸ್ಪಾಸ್ಕಿ ಮತ್ತು ಅಮೆರಿಕದ ವಿಶಿಷ್ಟ ಪ್ರತಿಭಾನ್ವಿತ ಬಾಬಿ ಫಿಷರ್ ನಡುವಿನ ‘ಶತಮಾನದ ಆಟ ‘ ಎಂದು ಕರೆಯುವ ಪಂದ್ಯ ೧೯೭೨ರಲ್ಲಿ ನಡೆಯಿತು. ಮತ್ತೆ ಆ ಪಂದ್ಯ ಸೋವಿಯತ್ ಪ್ರಾಬಲ್ಯಕ್ಕೆ ಸವಾಲೊಡ್ಡಿತು. ಅವರಿಬ್ಬರ ಮುಖಾಮುಖಿ ಅಮೆರಿಕ -ಸೋವಿಯೆತ್ ಗಳ ನಡುವಿನ ಶೀತಲ ಸಮರವನ್ನು ಚೆಸ್ ಬೋರ್ಡಿಗೂ ತಂದಿತು . ಇಡೀ ಪಂದ್ಯ, ಗೆಲುವಿಗಾಗಿ ಬಳಸಲಾಗುವ ರಹಸ್ಯ ಮತ್ತು ಅನುಚಿತ ತಂತ್ರಗಳಿಂದ , ಪರಸ್ಪರರ ಬಗೆಗಿನ ಅವ್ಯಕ್ತ ಸಂಶಯಗಳಿಂದ ತುಂಬಿತ್ತು. ಸ್ವತಃ ಚಂಚಲ ಮನಸ್ಥಿತಿಯ , ಹೋರಾಟದ ವ್ಯಕ್ತಿತ್ವದ ಫಿಷರ್ , ತಾನೆಂದಿಗೂ ಈ ಪಂದ್ಯವನ್ನು ಆಡಲು ಬರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ನಂತರ ಅಮೆರಿಕದ ರಾಯಭಾರಿ ಹೆನ್ರಿ ಕಿಸ್ಸಿಂಗರ್ ವಿಶೇಷ ಫೋನ್ ಕರೆ ಮಾಡಿ ಮನವೊಲಿಸಬೆಕಾಯಿತು.
ಫಿಷರ್ ಅಂದಿನ ಐತಿಹಾಸಿಕ ಪಂದ್ಯದಲ್ಲಿ ಸ್ಪಾಸ್ಕಿಯನ್ನು ಸೋಲಿಸಿದರು, ‘ಸುಳ್ಳು, ಮೋಸ, ಬೂಟಾಟಿಕೆ’ಯ ಸೋವಿಯತ್ ಚೆಸ್ ಯಂತ್ರದ ವಿರುದ್ಧ ‘ಸ್ವತಂತ್ರ ಜಗತ್ತು’ ಗೆಲುವು ಸಾಧಿಸಿತು ಎಂದು ಅಮೆರಿಕ ತಿಳಿಯಿತು. ಈ ಗೆಲುವು ಫಿಷರ್ ಗೆ , ಬಾಕ್ಸಿಂಗ್ ಜಗತ್ತಿನಲ್ಲಿ ಮುಹಮ್ಮದ್ ಅಲಿಗೆ ದೊರಕಿದ್ದ ರೀತಿಯ ಜನಪ್ರಿಯತೆಯನ್ನು ನೀಡಿತು. ಅಂದಿನಿಂದ ಇಂದಿನವರೆಗೂ ಚೆಸ್ ಜಗತ್ತು ಹಲವು ಸಾರ್ವಕಾಲಿಕ ಅತ್ಯುತ್ತಮ ಆಟಗಾರರು ಎಂದು ಪರಿಗಣಿಸಬಹುದಾದವರನ್ನು ಕಂಡಿದೆ, ಕಾಣುತ್ತಿದೆ. ಇಂಟರ್ನೆಟ್ನ ಉದಯದಿಂದಾಗಿ ಈಗ ಎಂದಿಗಿಂತಲೂ ಹೆಚ್ಚು ಜನಪ್ರಿಯವಾಗಿದೆ, ಇದು ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿಗೆ ಚೆಸ್ ಬಗ್ಗೆ ಮಾತನಾಡಲು ಮತ್ತು ಆಡಲು ಅನುವು ಮಾಡಿಕೊಡುತ್ತಿದೆ , ಚೆಸ್ ಅಸ್ತಿತ್ವಕ್ಕೆ ಬಂದ ಒಂದೂವರೆ ಸಹಸ್ರಮಾನಕ್ಕೂ ಹೆಚ್ಚಿನ ಕಾಲದ ನಂತರವೂ ಇತಿಹಾಸ ಬೆಳೆಯುತ್ತಿದೆ ಬದಲಾಗುತ್ತಲೇ ಇದೆ, ಮಾನವ ಬೌದ್ಧಿಕ ರಾಜಕೀಯ ಸಾಂಸ್ಕೃತಿಕ ವಿಕಸನದಲ್ಲಿ ಸಾಧನವಾಗಿ ಸರಕಾಗಿ ವೇದಿಕೆಯಾಗಿ ಇಂದಿಗೂ ಉಳಿದಿದೆ, ಮುಂದೆಯೂ ಉಳಿಯಲಿದೆ.





















































































































